ಮೈಸೂರು: ನಗರವೂ ಸೇರಿದಂತೆ ಜಿಲ್ಲೆಯ ವಿವಿಧೆಡೆ ಶುಕ್ರವಾರ ಸಂಜೆ ಗುಡುಗು, ಸಿಡಿಲು, ಬಿರುಗಾಳಿಯೊಂದಿಗೆ ಆಲಿಕಲ್ಲು ಸಹಿತ ಮಳೆಯಾಯಿತು.
ವರ್ಷದ ಮೊದಲ ‘ಜೋರು ಮಳೆ’ಯು ಬಿಸಿಲಿನ ಝಳದಿಂದ ಕಂಗೆಟ್ಟಿದ್ದ ಜನರಿಗೆ ತಂಪೆರೆಯಿತು. ಹಲವರು ಮಳೆಯ ಫೋಟೊ ತೆಗೆದು, ವಿಡಿಯೊ ಮಾಡಿ ಸಂಭ್ರಮಿಸಿದರು.
ಜಿಲ್ಲೆಯ ಬಿಳಿಕೆರೆ, ಕೆ.ಆರ್.ನಗರ, ಧರ್ಮಾಪುರ, ಪಿರಿಯಾಪಟ್ಟಣ, ಹುಣಸೂರು, ತಿ.ನರಸೀಪುರ, ನಂಜನಗೂಡು, ಬೆಟ್ಟದಪುರದಲ್ಲೂ ಮಳೆ ಬಿದ್ದಿತು.
ನಗರದ ಹಲವು ರಸ್ತೆಗಳಲ್ಲಿ ಮರಗಳು ರಸ್ತೆಗೆ ಉರುಳಿದವು. ಮಾನಂದವಾಡಿ ರಸ್ತೆಯಲ್ಲಿ ವಿದ್ಯುತ್ ಕಂಬಗಳು ಮುರಿದು ಬಿದ್ದವು. ಶಾಲಾ ವಾಹನ ಸೇರಿದಂತೆ ಹಲವು ವಾಹನಗಳ ಮೇಲೆ ಕಂಬ–ವೈರ್ಗಳು ಬಿದ್ದಿದ್ದವು. ಇದರಿಂದ ವಾಹನಗಳ ಸಂಚಾರಕ್ಕೆ ತೊಂದರೆಯಾಯಿತು. ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.