ಭಾನುವಾರ, 4 ಆಗಸ್ಟ್ 2024
×
ADVERTISEMENT
ಈ ಕ್ಷಣ :
ADVERTISEMENT

ನಿರುದ್ಯೋಗವೆಂಬ ರೋಗ ಸಾಂಕ್ರಾಮಿಕ ರೂಪ ತಾಳಿದೆ: ಕೇಂದ್ರದ ವಿರುದ್ಧ ರಾಹುಲ್ ಕಿಡಿ

Published 12 ಜುಲೈ 2024, 3:12 IST
Last Updated 12 ಜುಲೈ 2024, 3:12 IST
ಅಕ್ಷರ ಗಾತ್ರ

ನವದೆಹಲಿ: ‘ನಿರುದ್ಯೋಗ ಎಂಬ ರೋಗ’ವು ದೇಶದಲ್ಲಿ ಸಾಂಕ್ರಮಿಕ ರೂಪ ತಾಳಿದ್ದು, ಬಿಜೆಪಿ ಆಡಳಿತ ಇರುವ ರಾಜ್ಯಗಳು ಅವುಗಳ ಕೇಂದ್ರಸ್ಥಾನಗಳಾಗಿವೆ ಎಂದು ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಟೀಕಿಸಿದ್ದಾರೆ.

ಗುಜರಾತ್‌ನ ಭರೂಚ್ ಜಿಲ್ಲೆಯಲ್ಲಿ ಖಾಸಗಿ ಕಂಪನಿಯೊಂದರಲ್ಲಿ 40 ಖಾಲಿ ಹುದ್ದೆಗಳಿಗೆ ನಡೆದ ಸಂದರ್ಶನಕ್ಕೆ 800ಕ್ಕೂ ಅಧಿಕ ಆಕಾಂಕ್ಷಿಗಳು ಆಗಮಿಸಿದ ಪರಿಣಾಮ ಕಾಲ್ತುಳಿತದಂತಹ ಪರಿಸ್ಥಿತಿ ನಿರ್ಮಾಣವಾಗಿತ್ತು. ಈ ಘಟನೆಯನ್ನು ಉಲ್ಲೇಖಿಸಿ ರಾಹುಲ್ ಗಾಂಧಿ ಹೀಗೆ ಹೇಳಿದ್ದಾರೆ.

ಸಂದರ್ಶನ ನಡೆಯುವ ಹೋಟೆಲ್‌ನಲ್ಲಿ ಜಮಾಯಿಸಿದ್ದ ಆಕಾಂಕ್ಷಿಗಳ ಭಾರಿ ಪ್ರಮಾಣದ ಸರತಿ ಸಾಲು ಹಾಗೂ ನೂಕುನುಗ್ಗಲಿನಿಂದಾಗಿ ರ್‍ಯಾಂಪ್ ಮುರಿದು ಬೀಳುವ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದ್ದವು. ರ್‍ಯಾಂಪ್ ಮುರಿದು ಹಲವು ವಿದ್ಯಾರ್ಥಿಗಳು ಕೆಳಗೆ ಬಿದ್ದರೂ, ಅದೃಷ್ಠವಶಾತ್‌ ಯಾರಿಗೂ ಗಾಯವಾಗಿರಲಿಲ್ಲ.

‘ಸಾಮಾನ್ಯ ಕೆಲಸವೊಂದಕ್ಕೆ ಭಾರತ ಭವಿಷ್ಯವು ಸರತಿ ಸಾಲಿನಲ್ಲಿ ನಿಲ್ಲುತ್ತಿರುವುದು ಮೋದಿಯ ಅಮೃತ ಕಾಲದ ನಿಜಸ್ಥಿತಿ’ ಎಂದು ರಾಹುಲ್ ಗಾಂಧಿ ಎಕ್ಸ್‌ನಲ್ಲಿ ಬರೆದುಕೊಂಡಿದ್ದಾರೆ.

ಈ ವಿಡಿಯೊವನ್ನು ಹಂಚಿಕೊಂಡು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಕೂಡ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

‘ಕಳೆದ 22ವರ್ಷದಲ್ಲಿ ಗುಜರಾತ್‌ನಲ್ಲಿ ಬಿಜೆಪಿ ಮಾಡಿದ ‘ಮೋಸದ ಮಾದರಿ’ಗೆ ಸಾಕ್ಷ್ಯ ಇದು. ಕಳೆದ 10 ವರ್ಷದಲ್ಲಿ ಮೋದಿ ಸರ್ಕಾರವು ಯುವಕರ ಉದ್ಯೋಗವನ್ನು ಕಿತ್ತುಕೊಂಡು, ಅವರ ಭವಿಷ್ಯವನ್ನು ಹಾಳು ಮಾಡಿರುವುದಕ್ಕೂ ಈ ವಿಡಿಯೊ ಸಾಕ್ಷಿ’ ಎಂದು ಬರೆದುಕೊಂಡಿದ್ದಾರೆ.

‘ವರ್ಷಕ್ಕೆ 2 ಕೋಟಿ ಉದ್ಯೋಗ ಸೃಷ್ಠಿಸುವುದಾಗಿ ಬಿಜೆಪಿ ಭರವಸೆ ನೀಡಿತ್ತು. ಆದರೆ ಮಾಡಿದ್ದು, ಪ್ರಶ್ನೆ ಪತ್ರಿಕೆ ಸೋರಿಕೆ, ನೇಮಕಾತಿ ಹಗರಣ, ಶಿಕ್ಷಣ ಮಾಫಿಯಾ, ಸರ್ಕಾರಿ ಹುದ್ದೆಗಳನ್ನು ಹಲವು ವರ್ಷಗಳು ಖಾಲಿ ಇರಿಸಿದ್ದು, ಉದ್ದೇಶಪೂರ್ವಕವಾಗಿ ಎಸ್‌ಸಿ/ಎಸ್‌ಟಿ/ ಒಬಿಸಿ / ಇಡಬ್ಲ್ಯುಎಸ್‌ ಹುದ್ದೆಗಳನ್ನು ಭರ್ತಿ ಮಾಡದೇ ಇರುವುದು, ಅಗ್ನಿವೀರ್‌ನಂತಹ ಯೋಜನೆಗಳ ಮೂಲಕ ಗುತ್ತಿಗೆ ಆಧಾರದಲ್ಲಿ ನೇಮಕಾತಿ... ಇದರಿಂದ ಕೋಟ್ಯಾಂತರ ಯುವಕರು ಕೆಲಸಕ್ಕಾಗಿ ಬಾಗಿಲಿನಿಂದ ಬಾಗಿಲಿಗೆ ಅಲೆಯಬೇಕಾದ ಪರಿಸ್ಥಿತಿ ಬಂದಿದೆ’ ಎಂದು ಅವರು ಕಿಡಿಕಾರಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT