ಬುಧವಾರ, 3 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

EVM ಬದಲು ಮತಪತ್ರ ವ್ಯವಸ್ಥೆಗೆ ದೇಶ ಹಿಂದಿರುಗಬೇಕು: ದೀಪಂಕರ್ ಭಟ್ಟಾಚಾರ್ಯ

Published 23 ಜೂನ್ 2024, 12:44 IST
Last Updated 23 ಜೂನ್ 2024, 12:44 IST
ಅಕ್ಷರ ಗಾತ್ರ

ನವದೆಹಲಿ: ಚುನಾವಣೆಗಳಲ್ಲಿ ಮತಪತ್ರಗಳನ್ನು ಬಳಸುವ ವ್ಯವಸ್ಥೆಗೆ ದೇಶ ಹಿಂದಿರುಗಬೇಕಿದೆ ಎಂದು ಕಮ್ಯುನಿಸ್ಟ್‌ ಪಾರ್ಟಿ ಆಫ್‌ ಇಂಡಿಯಾ (ಮಾರ್ಕ್ಸ್‌–ಲೆನಿನ್‌ವಾದಿ) ಲಿಬರೇಷನ್‌ ಪಕ್ಷದ ನಾಯಕ ದೀಪಂಕರ್‌ ಭಟ್ಟಾಚಾರ್ಯ ಹೇಳಿದ್ದಾರೆ. ವಿದ್ಯುನ್ಮಾನ ಮತಯಂತ್ರ (ಇವಿಎಂ) ಬಳಕೆ ಬಗ್ಗೆ ವಿರೋಧ ಪಕ್ಷಗಳು ಕಳವಳ ವ್ಯಕ್ತಪಡಿಸುತ್ತಿರುವುದಕ್ಕೆ ಸಂಬಂಧಿಸಿದಂತೆ ಅವರು ಈ ಹೇಳಿಕೆ ನೀಡಿದ್ದಾರೆ.

ಪಿಟಿಐಗೆ ನೀಡಿರುವ ಸಂದರ್ಶನದಲ್ಲಿ ಮಾತನಾಡಿರುವ ಭಟ್ಟಾಚಾರ್ಯ, ಶಿಕ್ಷಣ ವ್ಯವಸ್ಥೆಯ 'ಕೇಸರೀಕರಣ' ಮತ್ತು ಷೇರು ಮಾರುಕಟ್ಟೆ 'ಹಗರಣ'ದ ವಿರುದ್ಧವೂ ಧ್ವನಿ ಎತ್ತಿದ್ದಾರೆ.

‌2024ರ ಲೋಕಸಭೆ ಚುನಾವಣೆ ಕುರಿತು ಮಾತನಾಡುತ್ತಾ, ಇವಿಎಂಗಳಲ್ಲಿನ ಮತಗಳು ಮತ್ತು ವೆರಿಫೈಯಲ್ ಪೇಪರ್ ಆಡಿಟ್ ಟ್ರಯಲ್ (ವಿವಿಪಿಎಟಿ or ವಿವಿ–ಪ್ಯಾಟ್‌) ಯಂತ್ರಗಳಲ್ಲಿನ ಮತಗಳನ್ನು ಪೂರ್ಣ ಪ್ರಮಾಣದಲ್ಲಿ (ಶೇ 100 ರಷ್ಟು) ಹೋಲಿಸಿ ನೋಡಬೇಕು ಎಂಬ ಮನವಿಗಳನ್ನು ಸುಪ್ರೀಂ ಕೋರ್ಟ್‌ ತಿರಸ್ಕರಿಸಿದೆ ಎಂದು ಉಲ್ಲೇಖಿಸಿದ್ದಾರೆ.

ವಿವಿ–ಪ್ಯಾಟ್‌ ಎಂಬುದು ಮತ ಪರೀಶಿಲನೆ ವ್ಯವಸ್ಥೆಯಾಗಿದೆ. ಇದು ಮತದಾರರು ತಾವು ಹಾಕಿದ ಮತ ಸರಿಯಾಗಿದೆಯೇ ಎಂಬುದನ್ನು ನೋಡಲು ಅವಕಾಶ ಮಾಡಿಕೊಡುತ್ತದೆ. ಮತ ಎಣಿಕೆ ಸಂದರ್ಭದಲ್ಲಿ ವಿವಿ–ಪ್ಯಾಟ್‌ನಲ್ಲಿನ ಮತಗಳನ್ನು ಇವಿಎಂನಲ್ಲಿರುವ ಮತಗಳೊಂದಿಗೆ ಸಂಪೂರ್ಣವಾಗಿ ತಾಳೆ ಮಾಡುವುದಿಲ್ಲ. ಶೇ5ರಷ್ಟು ಮತಗಳನ್ನಷ್ಟೇ ಹೋಲಿಸಿ ನೋಡಲು ಅವಕಾಶವಿದೆ.

'ನನ್ನ ಪ್ರಕಾರ, ಒಂದು ದಿನ ಈ ದೇಶವು ಮತಪತ್ರ ವ್ಯವಸ್ಥೆಗೆ ಹಿಂದಿರುಗಬೇಕಾಗುತ್ತದೆ. ಇದು ನನ್ನ ವೈಯಕ್ತಿಕ ಅಭಿಪ್ರಾಯ' ಎಂದು ಭಟ್ಟಾಚಾರ್ಯ ಹೇಳಿದ್ದಾರೆ.

ತಮ್ಮ ಪಕ್ಷದ ನಿಲುವು ಸಹ ಇದೇ ಆಗಿದೆ ಎಂದಿರುವ ಅವರು, ಈ ಅಭಿಪ್ರಾಯವನ್ನು ಇತರ ಪಕ್ಷಗಳೊಂದಿಗೂ ಹಂಚಿಕೊಂಡಿದ್ದೇವೆ. ಆದರೆ, ದೇಶದ ಎಲ್ಲ ಪಕ್ಷಗಳೂ ಇದನ್ನು ಒಪ್ಪುತ್ತವೆ ಎಂಬ ನಂಬಿಕೆಯೇನೂ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

'ಚುನಾವಣಾ ಫಲಿತಾಂಶಕ್ಕೂ ಇದಕ್ಕೂ ಯಾವುದೇ ಸಂಬಂಧವಿಲ್ಲ. ಇದು ಸೋತವರು ಮಾಡುತ್ತಿರುವ ಆರೋಪ ಎಂದು ಬಿಜೆಪಿಯುವರು ಸಾಮಾನ್ಯವಾಗಿ ಹೇಳುತ್ತಾರೆ. ಪ್ರತಿ ಸಲ ನಾವು ಸೋತಾಗ, ಇವಿಎಂ ಬಗ್ಗೆ ಮಾತನಾಡುತ್ತೇವೆ. ಆದರೆ, ಇದು ಆರೋಪ–ಪ್ರತ್ಯಾರೋಗಳ ವಿಚಾರವಲ್ಲ. ಇವೆಲ್ಲವುಗಳನ್ನೂ ಮೀರಿ, ಚುನಾವಣೆ ವ್ಯವಸ್ಥೆಯು ಜನರ ನಂಬಿಕೆ ಮತ್ತು ಪಾರದರ್ಶಕತೆಗೆ ಸಂಬಂಧಿಸಿದ್ದಾಗಿದೆ' ಎಂದು ಪ್ರತಿಪಾದಿಸಿದ್ದಾರೆ.

'ಹಾಗಾಗಿ, ಜನರು ಸಂಪೂರ್ಣ ನಂಬಿಕೆ ಇರಿಸದಿದ್ದರೂ, ಈ ರೀತಿಯ ಬಹುದೊಡ್ಡ ಚುನಾವಣಾ ಕಸರತ್ತು ನಡೆಸುವುದರಲ್ಲಿ ಯಾವ ಅರ್ಥವಿದೆ' ಎಂದು ಪ್ರಶ್ನಿಸಿದ್ದಾರೆ.

ಚುನಾವಣಾ ಆಯೋಗವು 'ಸೂಕ್ತ ಕಾರಣ'ಗಳನ್ನು ನೀಡದಿರುವ ಕಾರಣ, ಮತಪತ್ರಕ್ಕಾಗಿನ ಬೇಡಿಕೆ ಹೆಚ್ಚಾಗುತ್ತಿದೆ ಎಂದೂ ಅಭಿಪ್ರಾಯಪಟ್ಟಿರುವ ಅವರು, 'ಮುಂದಿನ ದಿನಗಳಲ್ಲಿ ಈ ಬೇಡಿಕೆಯು ಪ್ರಮುಖ ವಿಚಾರವಾಗಲಿದೆ. ಮತ್ತೆ ಮತಪತ್ರ ವ್ಯವಸ್ಥೆಗೆ ಹಿಂದಿರುಗುತ್ತೇವೆ ಎಂಬ ನಿರೀಕ್ಷೆ ಇದೆ' ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಪ್ರಜಾವಾಣಿ ಕನ್ನಡ ಧ್ವನಿ ಪಾಡ್‌ಕಾಸ್ಟ್ ಆ್ಯಂಕರ್ ಚಾನೆಲ್‌ನಲ್ಲಿ ಕೇಳಲು ಇಲ್ಲಿ ಕ್ಲಿಕ್ ಮಾಡಿ.
ಆ್ಯಪಲ್ ಪಾಡ್‌ಕಾಸ್ಟ್ ಸ್ಪಾಟಿಫೈಗೂಗಲ್ ಪಾಡ್‌ಕಾಸ್ಟ್ಪಾಕೆಟ್ ಕಾಸ್ಟ್ಓವರ್‌ಕಾಸ್ಟ್ ಈ ತಾಣಗಳಲ್ಲಿ ಕೂಡ ಪ್ರಜಾವಾಣಿಯ ಕನ್ನಡ ಧ್ವನಿ ಕೇಳಬಹುದು. ಸಂಬಂಧಿತ ಆ್ಯಪ್‌ಗಳು ಗೂಗಲ್ ಪ್ಲೇ ಸ್ಟೋರ್‌ನಲ್ಲಿ ದೊರೆಯುತ್ತವೆ.
ಪ್ರಜಾವಾಣಿ ಪಾಡ್‌ಕಾಸ್ಟ್ ಸಂಗ್ರಹ ಇಲ್ಲಿದೆ– ಕನ್ನಡ ಧ್ವನಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT