ಗುರುವಾರ, 4 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಹಿಂದುತ್ವವನ್ನು ರಾಹುಲ್ ಅವಮಾನಿಸಿಲ್ಲ: ಕಾಂಗ್ರೆಸ್ ನಾಯಕನ ಬೆನ್ನಿಗೆ ನಿಂತ ಉದ್ಧವ್

Published 2 ಜುಲೈ 2024, 12:30 IST
Last Updated 2 ಜುಲೈ 2024, 12:30 IST
ಅಕ್ಷರ ಗಾತ್ರ

ಮುಂಬೈ: ಲೋಕಸಭೆಯಲ್ಲಿ ರಾಹುಲ್ ಗಾಂಧಿಯ ಚೊಚ್ಚಲ ಭಾಷಣಕ್ಕೆ ಸಂಬಂಧಿಸಿದಂತೆ ಹಿಂದುತ್ವ ಕುರಿತು ಎದ್ದಿರುವ ವಿವಾದದಲ್ಲಿ ಶಿವಸೇನೆ (ಯುಬಿಟಿ) ಮುಖ್ಯಸ್ಥ ಉದ್ಧವ್ ಠಾಕ್ರೆ ಅವರು ವಿರೋಧ ಪಕ್ಷದ ನಾಯಕನ ಬೆನ್ನಿಗೆ ನಿಂತಿದ್ದಾರೆ.

'ಭಾಷಣದಲ್ಲಿ ಹಿಂದುತ್ವದ ವಿರುದ್ಧ ಒಂದು ಪದವನ್ನೂ ರಾಹುಲ್ ಮಾತನಾಡಿಲ್ಲ’ ಎಂದು ಠಾಕ್ರೆ ಹೇಳಿದ್ದಾರೆ.

‘ನಾನು ರಾಹುಲ್ ಗಾಂಧಿ ಅವರ ಭಾಷಣವನ್ನು ಆಲಿಸಿದ್ದೇನೆ. ನಾವು ಯಾರೂ ಹಿಂದುತ್ವವನ್ನು ಅವಮಾನಿಸಿಲ್ಲ ಹಾಗೂ ಅದನ್ನು ಸಹಿಸುವುದೂ ಇಲ್ಲ. ರಾಹುಲ್ ಗಾಂಧಿ ಅವರು ಬಿಜೆಪಿ ಎಂಬುದು ಹಿಂದುತ್ವ ಅಲ್ಲ ಎಂದಿದ್ದಾರೆ. ನಾವು ಬಿಜೆಪಿಯ ಸಂಗವನ್ನು ತೊರೆದಿದ್ದೇವೆ. ಬಿಜೆಪಿ ಎಂದರೆ ಮಾತ್ರ ಹಿಂದುತ್ವವಲ್ಲ’ ಎಂದಿದ್ದಾರೆ.

‘ರಾಹುಲ್ ಅವರು ಭಗವಾನ್ ಶಿವನ ಚಿತ್ರವನ್ನು ತೋರಿಸಿದ್ದಾರೆ. ಆದರೆ ಅದನ್ನು ನಿಷೇಧಿಸಿರುವುದು ಹಿಂದುತ್ವವೇ? ರಾಹುಲ್ ಅವರು ಹಿಂದುತ್ವ ಹಾಗೂ ಹಿಂದೂಗಳನ್ನು ಅವಮಾನಿಸುತ್ತಾರೆ ಎಂದು ಖಂಡಿತವಾಗಿಯೂ ಭಾವಿಸುವುದಿಲ್ಲ’ ಎಂದು ಠಾಕ್ರೆ ಹೇಳಿದ್ದಾರೆ.

ಲೋಕಸಭೆಯಲ್ಲಿ ರಾಹುಲ್ ಗಾಂಧಿ ಮಾಡಿದ ಚೊಚ್ಚಲ ಭಾಷಣದಲ್ಲಿ ‘ತಮ್ಮನ್ನು ತಾವು ಹಿಂದೂಗಳೆಂದು ಕರೆದುಕೊಳ್ಳುವವರು ಹಿಂಸಾಚಾರ ಹಾಗೂ ದ್ವೇಷದಲ್ಲಿ ಹಗಲಿರುಳು ನಿರತರಾಗಿದ್ದಾರೆ’ ಎಂದಿದ್ದರು. ‘ಇಡೀ ಹಿಂದೂ ಸಮಾಜವು ಹಿಂಸಾ ಪ್ರವೃತ್ತಿಯಿಂದ ಕೂಡಿದೆ ಎಂದು ಕರೆಯುವುದು ತುಂಬಾ ಗಂಭೀರ ವಿಷಯ’ ಎಂದು ಬಿಜೆಪಿ ನಾಯಕರು ವಾಗ್ದಾಳಿ ನಡೆಸಿದ್ದರು. ಈ ಚರ್ಚೆಯಲ್ಲಿ ರಾಹುಲ್ ಗಾಂಧಿಯ ಕೆಲವೊಂದು ಪ್ರತಿಕ್ರಿಯೆಗಳನ್ನು ಕಡತಗಳಿಂದ ತೆಗೆದುಹಾಕಲಾಗಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT