ಶನಿವಾರ, 5 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ರಾಜ್ಯೋತ್ಸವ ಪ್ರಶಸ್ತಿ: ತಜ್ಞರ ಸಲಹಾ ಸಮಿತಿ ರಚನೆ

Published : 5 ಅಕ್ಟೋಬರ್ 2024, 12:15 IST
Last Updated : 5 ಅಕ್ಟೋಬರ್ 2024, 12:15 IST
ಫಾಲೋ ಮಾಡಿ
Comments

ಬೆಂಗಳೂರು: ಈ ಸಾಲಿನ ‘ರಾಜ್ಯೋತ್ಸವ ಪ್ರಶಸ್ತಿ’ಗೆ ವಿವಿಧ ಕ್ಷೇತ್ರಗಳ ಸಾಧಕರ ಆಯ್ಕೆಗೆ ಸಂಬಂಧಿಸಿದಂತೆ ಕನ್ನಡ ಮತ್ತು ಸಂಸ್ಕೃತಿ ಸಚಿವ ಶಿವರಾಜ್ ತಂಗಡಗಿ ಅಧ್ಯಕ್ಷತೆಯಲ್ಲಿ 48 ಸದಸ್ಯರನ್ನೊಳಗೊಂಡ ಸಲಹಾ ಸಮಿತಿಯನ್ನು ಸರ್ಕಾರ ರಚಿಸಿದೆ. 

ಈ ಸಮಿತಿಯು ಸಾಹಿತ್ಯ, ವೈದ್ಯಕೀಯ, ಕೃಷಿ, ಸಮಾಜಸೇವೆ, ಚಲನಚಿತ್ರ, ಕ್ರೀಡೆ ಸೇರಿ ವಿವಿಧ ಕ್ಷೇತ್ರಗಳ ತಜ್ಞರನ್ನು ಒಳಗೊಂಡಿದೆ. ಕನ್ನಡ ಅಭಿವೃದ್ಧಿ ಪ್ರಾಧಿಕಾರ, ಕನ್ನಡ ಪುಸ್ತಕ ಪ್ರಾಧಿಕಾರ, ಗಡಿ ಅಭಿವೃದ್ಧಿ ಪ್ರಾಧಿಕಾರ, ಕುವೆಂಪು ಭಾಷಾ ಭಾರತಿ ಪ್ರಾಧಿಕಾರ, ಕರ್ನಾಟಕ ಸಾಹಿತ್ಯ ಅಕಾಡೆಮಿ, ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿ, ಕರ್ನಾಟಕ ನಾಟಕ ಅಕಾಡೆಮಿ, ಕರ್ನಾಟಕ ಲಲಿತಕಲಾ ಅಕಾಡೆಮಿ, ಕರ್ನಾಟಕ ಶಿಲ್ಪಕಲಾ ಅಕಾಡೆಮಿ, ಕರ್ನಾಟಕ ಯಕ್ಷಗಾನ ಅಕಾಡೆಮಿ, ಕರ್ನಾಟಕ ಜಾನಪದ ಅಕಾಡೆಮಿ, ಕರ್ನಾಟಕ ಚಲನಚಿತ್ರ ಅಕಾಡೆಮಿ ಹಾಗೂ ಕರ್ನಾಟಕ ಮಾಧ್ಯಮ ಅಕಾಡೆಮಿ ಪ್ರತಿನಿಧಿಗಳು ಸಮಿತಿಯ ಪದನಿಮಿತ್ತ ಸದಸ್ಯರಾಗಿದ್ದಾರೆ. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಿರ್ದೇಶಕರು ಸದಸ್ಯ ಕಾರ್ಯದರ್ಶಿಯಾಗಿದ್ದಾರೆ. 

ಸಲಹಾ ಸಮಿತಿ ಸದಸ್ಯರು: ನ್ಯಾಯಾಂಗ ಕ್ಷೇತ್ರದಿಂದ ಸಿ.ಎಸ್. ದ್ವಾರಕನಾಥ್, ಆಡಳಿತ ಕ್ಷೇತ್ರದಿಂದ ರವಿಕುಮಾರ್, ಸದಾಶಿವ ಮರ್ಜಿ, ಸಮಾಜ ಸೇವೆ ಕ್ಷೇತ್ರದಿಂದ ಬಾಬು ಭಂಡಾರಿಗಲ್, ಶೈಲಜಾ ಹಿರೇಮಠ, ಸಾಹಿತ್ಯ ಕ್ಷೇತ್ರದಿಂದ ರಂಜಾನ್ ದರ್ಗಾ, ವೈ.ಸಿ. ಭಾನುಮತಿ, ಪ್ರೊ.ಜಿ. ಶರಣಪ್ಪ, ಪ್ರೊ.ದೊಣ್ಣೆಗೌಡರು ವೆಂಕಣ್ಣ, ಹಿರೇಮಗಳೂರು ಕಣ್ಣನ್, ಪುಷ್ಪ ಶಿವಕುಮಾರ್, ಜಾನಪದ ಕ್ಷೇತ್ರದಿಂದ ರತ್ನಮ್ಮ, ಶರಣಪ್ಪ ವಡಿಗೇರೆ, ವೈದ್ಯಕೀಯ ಕ್ಷೇತ್ರದಿಂದ ಡಾ. ತಿಮ್ಮಪ್ಪ, ಡಾ.ಕ್ಯಾಪ್ಟನ್ ಕೃಷ್ಣಮೂರ್ತಿ, ಸಂಗೀತ ಕ್ಷೇತ್ರದಿಂದ ಎಂ. ವೆಂಕಟೇಶ್ ಕುಮಾರ್ ಹಾಗೂ ನೃತ್ಯ ಕ್ಷೇತ್ರದಿಂದ ಕೆ. ಕುಮಾರ್ ಸದಸ್ಯರಾಗಿದ್ದಾರೆ. 

ರಂಗಭೂಮಿ ಕ್ಷೇತ್ರದಿಂದ ಸಿ. ಬಸವಲಿಂಗಯ್ಯ, ಪಿ. ತಿಪ್ಪೇಸ್ವಾಮಿ, ಶ್ರೀರಾಮ ಇಟ್ಟಣ್ಣನವರ, ಸಿಹಿ ಕಹಿ ಚಂದ್ರು, ಶಿಲ್ಪಕಲೆ ಕ್ಷೇತ್ರದಿಂದ ಜಯಣ್ಣಚಾರ್, ಕೃಷಿ ಕ್ಷೇತ್ರದಿಂದ ಮಲ್ಲಿಕಾರ್ಜುನ ಹೊಸಪಾಳ್ಯ, ಎಚ್.ಕೆ. ಶ್ರೀಕಂಠ, ಚಿತ್ರಕಲೆ ಕ್ಷೇತ್ರದಿಂದ ಸಿ. ಚಂದ್ರಶೇಖರ್, ಚಲನಚಿತ್ರ ಕ್ಷೇತ್ರದಿಂದ ಹಂಸಲೇಖ, ರವಿಚಂದ್ರನ್, ಶಿಕ್ಷಣ ಕ್ಷೇತ್ರದಿಂದ ಪ್ರೊ. ರಾಧಾಕೃಷ್ಣ, ಪ್ರೊ. ಕೃಷ್ಣೇಗೌಡ, ಪ್ರತ್ರಿಕೋದ್ಯಮ ಕ್ಷೇತ್ರದಿಂದ ಸಿದ್ದರಾಜು, ಪರಿಸರ ಕ್ಷೇತ್ರದಿಂದ ನಾಗೇಶ ಹೆಗಡೆ, ವಾಣಿಜ್ಯ ಮತ್ತು ಕೈಗಾರಿಕೆ ಕ್ಷೇತ್ರದಿಂದ ಕೆ. ಚನ್ನಪ್ಪ, ಕ್ರೀಡಾ ಕ್ಷೇತ್ರದಿಂದ ಎ.ಬಿ. ಸುಬ್ಬಯ್ಯ ಹಾಗೂ ಜೋಸೆಫ್ ಹೂವರ್ ಅವರನ್ನು ಸದಸ್ಯರನ್ನಾಗಿ ನೇಮಕ ಮಾಡಲಾಗಿದೆ. 

ಕರ್ನಾಟಕ ರಾಜ್ಯೋತ್ಸವದ 69ನೇ ವರ್ಷಾಚರಣೆ ಅಂಗವಾಗಿ ಈ ಬಾರಿ 69 ಸಾಧಕರಿಗೆ ಸರ್ಕಾರವು ರಾಜ್ಯೋತ್ಸವ ಪ್ರಶಸ್ತಿ ನೀಡಲಿದೆ. ಪ್ರಶಸ್ತಿಯು ತಲಾ ₹ 5 ಲಕ್ಷ ನಗದು ಹಾಗೂ 25 ಗ್ರಾಂ. ಚಿನ್ನದ ಪದಕ ಒಳಗೊಂಡಿರಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT