ಮೈಸೂರು: ‘ಸಿದ್ದರಾಮಯ್ಯ ಪತ್ನಿ ಪಾರ್ವತಿ ಮುಡಾಕ್ಕೆ ಬರೆದಿದ್ದ ಪತ್ರಕ್ಕೆ ವೈಟ್ನರ್ ಹಚ್ಚಿ ತಿರುಚಲಾಗಿದೆ ಎಂಬ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರ ಆರೋಪದಲ್ಲಿ ಹುರುಳಿಲ್ಲ. ಅವರು ವಿಜಯನಗರದಲ್ಲೇ ನಿವೇಶನ ಕೊಡುವಂತೆ ಕೇಳಿಲ್ಲ’ ಎಂದು ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ ತಿಳಿಸಿದರು.
ಇಲ್ಲಿ ಗುರುವಾರ ಪತ್ರಿಕಾಗೋಷ್ಠಿಯಲ್ಲಿ ದಾಖಲೆಗಳನ್ನು ಬಿಡುಗಡೆ ಮಾಡಿದ ಅವರು, ‘ಮುಖ್ಯಮಂತ್ರಿ ಪತ್ನಿಗೆ ನಿವೇಶನ ನೀಡುವಾಗ ಮುಡಾದಿಂದ ಪರಿಗಣಿಸಲಾಗಿರುವ ಪತ್ರವೇ ಬೇರೆ. ಕುಮಾರಸ್ವಾಮಿ ಆರೋಪಿಸುತ್ತಿರುವ ಪತ್ರವೇ ಬೇರೆ. ವೈಟ್ನರ್ ಹಚ್ಚಿರುವ ಜಾಗದಲ್ಲಿರುವುದು ‘ದೇವನೂರು 3ನೇ ಹಂತದ ಬಡಾವಣೆಯಲ್ಲಿ ಅಥವಾ ನಂತರ ರಚಿಸಿದ ಸಮಾನಾಂತರ ಬಡಾವಣೆಯಲ್ಲಿ ಕೊಡಿ’ ಎಂದಷ್ಟೇ ಇದೆ. ಇದನ್ನು ಏನೇನೋ ಊಹೆ ಮಾಡಿಕೊಂಡು ಆರೋಪಿಸಲಾಗುತ್ತಿದೆ’ ಎಂದು ತಿಳಿಸಿದರು.
‘ವೈಟ್ನರ್ ಹಚ್ಚಿರುವ ಹಿಂದೆಯಿಂದ ಟಾರ್ಜ್ನಿಂದ ಲೈಟ್ ಬಿಟ್ಟು ನೋಡಿದರೆ ಅದು ಗೊತ್ತಾಗುತ್ತದೆ’ ಎಂದು ಪ್ರದರ್ಶಿಸಿದರು.