ಸೋಮವಾರ, 16 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಬಾಂಗ್ಲಾದ ಮಾಜಿ ಪ್ರಧಾನಿ ಹಸೀನಾ ವಿರುದ್ಧ ಹೊಸ ಪ್ರಕರಣ

ಮೀನು ವ್ಯಾಪಾರಿ ಸಾವಿಗೆ ಸಂಬಂಧಿಸಿದ ಕೇಸ್
Published : 19 ಆಗಸ್ಟ್ 2024, 2:15 IST
Last Updated : 19 ಆಗಸ್ಟ್ 2024, 2:15 IST
ಫಾಲೋ ಮಾಡಿ
Comments

ಢಾಕಾ: ಬಾಂಗ್ಲಾದೇಶದ ಮಾಜಿ ಪ್ರಧಾನಿ ಶೇಖ್ ಹಸೀನಾ ಅವರ ವಿರುದ್ಧ ಕೊಲೆ ಪ್ರಕರಣವೊಂದನ್ನು ಹೊಸದಾಗಿ ದಾಖಲಿಸಲಾಗಿದೆ.

ಹಸೀನಾ ಮಾತ್ರವಲ್ಲದೆ ಅವರ ಸಂಪುಟದಲ್ಲಿ ಸಚಿವರಾಗಿದ್ದ ಕೆಲವರು ಸೇರಿದಂತೆ ಒಟ್ಟು 62 ಮಂದಿಯ ವಿರುದ್ಧ ಈ ಪ್ರಕರಣ ದಾಖಲಾಗಿದೆ. ಮೀಸಲಾತಿ ವಿಚಾರವಾಗಿ ನಡೆದ ಪ್ರತಿಭಟನೆಗಳ ಸಂದರ್ಭದಲ್ಲಿ ಮೀನು ವ್ಯಾಪಾರಿಯೊಬ್ಬರ ಸಾವಿಗೆ ಸಂಬಂಧಿಸಿದಂತೆ ಈ ಪ್ರಕರಣ ದಾಖಲಿಸಲಾಗಿದೆ ಎಂದು ಸ್ಥಳೀಯ ಮಾಧ್ಯಮವೊಂದು ವರದಿ ಮಾಡಿದೆ.ಹಸೀನಾ ಅವರು ಪ್ರಧಾನಿ ಹುದ್ದೆಗೆ ರಾಜೀನಾಮೆ ನೀಡಿ, ದೇಶ ತೊರೆದ ನಂತರದಲ್ಲಿ ಅವರ ವಿರುದ್ಧ ಹಲವು ಪ್ರಕರಣಗಳು ದಾಖಲಾಗಿವೆ. ಈಗಿನ ಪ್ರಕರಣವನ್ನು ಭಾನುವಾರ ದಾಖಲಿಸಲಾಗಿದೆ.

ಮೃತ ವ್ಯಾಪಾರಿಯ ಪತ್ನಿ ಶಹನಾಜ್ ಬೇಗಂ ಸಲ್ಲಿಸಿರುವ ದೂರು ಆಧರಿಸಿ ಪ್ರಕರಣ ದಾಖಲಾಗಿದೆ. ಮೀನು ಮಾರುಕಟ್ಟೆಯಿಂದ ಜುಲೈ 21ರಂದು ವಾಪಸ್ ಬರುತ್ತಿದ್ದಾಗ ಗುಂಡಿಕ್ಕಿ ಅವರನ್ನು ಹತ್ಯೆ ಮಾಡಲಾಗಿತ್ತು. 

ಮಾಜಿ ಸಚಿವರಾದ ಅಸಾದುಜ್ಜಮಾನ್ ಖಾನ್, ಒಬೈದುಲ್ ಖಾದರ್, ಮಾಜಿ ಸಂಸದ ಶಮೀಮ್ ಒಸ್ಮಾನ್ ಅವರು ಕೂಡ ಆರೋಪಿಗಳು ಎಂದು ಉಲ್ಲೇಖಿಸಲಾಗಿದೆ. ಪ್ರತಿಭಟನೆಯಲ್ಲಿ ತೊಡಗಿದ್ದ ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರ ಮೇಲೆ ಗುಂಡು ಹಾರಿಸಲು ಹಸೀನಾ, ಖಾದರ್ ಮತ್ತು ಅಸಾದುಜ್ಜಮಾನ್ ಅವರು ಆದೇಶಿಸಿದ್ದರು ಎಂದು ದೂರಲಾಗಿದೆ.

ಬಾಂಗ್ಲಾ ಪೊಲೀಸ್‌ ಠಾಣೆಗಳಲ್ಲಿ ವರ್ಗಾವಣೆ ಪರ್ವ: ವರದಿ

ಶೇಖ್‌ ಹಸೀನಾ ಅವರ ನೇತೃತ್ವದ ಸರ್ಕಾರವು ಪದಚ್ಯುತಿಗೊಂಡ ನಂತರ ದೇಶದಲ್ಲಿ ಪೊಲೀಸ್‌ ಅಧಿಕಾರಿಗಳ ವರ್ಗಾವಣೆ ಪರ್ವ ಆರಂಭವಾಗಿದೆ. 18 ಮಂದಿ ಠಾಣೆ ಉಸ್ತುವಾರಿ ಅಧಿಕಾರಿಗಳನ್ನು ವರ್ಗಾವಣೆ ಮಾಡಿದ ಬೆನ್ನಲ್ಲೇ, ಢಾಕಾದಲ್ಲಿರುವ 32 ಠಾಣೆಗಳ ಮುಖ್ಯಸ್ಥರನ್ನು ವರ್ಗಾವಣೆ ಮಾಡಲಾಗಿದೆ ಎಂದು ಮಾಧ್ಯಮವೊಂದು ವರದಿ ಮಾಡಿದೆ.

ಭಾನುವಾರ ಮಧ್ಯರಾತ್ರಿ ವರ್ಗಾವಣೆ ಆದೇಶ ಕಳುಹಿಸಲಾಗಿದೆ ಎಂದು ಬಿಡಿನ್ಯೂಸ್‌24.ಕಾಮ್ ಸುದ್ದಿ ಪೋರ್ಟಲ್ ಹೇಳಿದೆ.

ಈವರೆಗೆ ಢಾಕಾ ಮೆಟ್ರೊಪಾಲಿಟನ್‌ ಪೊಲೀಸ್‌ (ಡಿಎಂಪಿ) ವ್ಯಾಪ್ತಿಯಲ್ಲಿ ಬರುವ 50 ಠಾಣೆಗಳ ಮುಖ್ಯಸ್ಥರನ್ನು ವರ್ಗಾವಣೆ ಮಾಡಲಾಗಿದೆ. ಆಗಸ್ಟ್‌ 13ರಂದು 18 ಮಂದಿ ಠಾಣೆ ಉಸ್ತುವಾರಿಗಳನ್ನು ವರ್ಗಾವಣೆ ಮಾಡಲಾಗಿತ್ತು.

ವರದಿ ಪ್ರಕಾರ, ವರ್ಗಾವಣೆಗೊಂಡ ಮುಖ್ಯಸ್ಥರ ಬಳಿ ಈ ಹಿಂದೆ ಇದ್ದ ಆದೇಶ ಹೊರಡಿಸುವ ಅಧಿಕಾರ ಇರುವುದಿಲ್ಲ. ಇವರಲ್ಲಿ ಕೆಲವರನ್ನು ದೇಶದಾದ್ಯಂತ ಇರುವ ಪೊಲೀಸ್‌ ಸಿಬ್ಬಂದಿ ತರಬೇತಿ ಕೇಂದ್ರಗಳಿಗೆ ಕಳುಹಿಸಲಾಗಿದೆ. ಉಳಿದವರನ್ನು ಪ್ರವಾಸಿ ಪೊಲೀಸ್‌, ಕೈಗಾರಿಕಾ ಪೊಲೀಸ್‌ಗಳಾಗಿ ವರ್ಗಾವಣೆ ಮಾಡಲಾಗಿದೆ.

ವರದಿ ಪ್ರಕಾರ, ಆಗಸ್ಟ್‌ 13ರಂದು ಮೂವರು ಹೆಚ್ಚುವರಿ ಮಹಾ ನಿರ್ದೇಶಕರು ಸೇರಿದಂತೆ 51 ಪೊಲೀಸ್‌ ಸಿಬ್ಬಂದಿಯನ್ನು ವರ್ಗಾವಣೆ ಮಾಡಲಾಗಿದೆ. ಶನಿವಾರ, ಡಿಎಂಪಿ ಹೆಚ್ಚುವರಿ ಉಪ ಪೊಲೀಸ್‌ ಆಯುಕ್ತ ಮತ್ತು ಸಹಾಯಕ ಆಯುಕ್ತ ಶ್ರೇಣಿಯ 13 ಅಧಿಕಾರಿಗಳನ್ನು ವರ್ಗಾವಣೆ ಮಾಡಿ ಅದೇ ದಿನ ಏಳು ಮಂದಿಯನ್ನು ಡಿಎಂಪಿ ಉಪ ಆಯುಕ್ತರ ಹುದ್ದೆಗೆ ನೇಮಕ ಮಾಡಿಕೊಳ್ಳಲಾಗಿದೆ.

ಭಾನುವಾರ 73 ಪೊಲೀಸ್‌ ಅಧಿಕಾರಿಗಳಿಗೆ ಬಡ್ತಿ ನೀಡಲಾಗಿದೆ ಎಂದು ವರದಿಯು ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT